ನಿಸರ್ಗದ ಈ ಕೂಗು ನಮಗೆ ಕೇಳುವುದೆಂದು……..?!
ಲೇಖಕ : ರಾಘವೇಂದ್ರ ಹೆಗಡೆ
raghavendra.ih@gmail.com
http://raganouke.wordpress.com
ನಿನ್ನ ಹೊರೆಯ ಭಾರ ಇಳಿಸುವ ಸನ್ನಾಹದಿ ನಾನು..
ಆದರೆ..? ನನ್ನನೇ ಜರೆಯುತ್ತ ನಿನ್ನ ತಲೆಗೇ ಅದರ
ಸುತ್ತಿಕೊಳ್ಳುವ ದುಸ್ಸಾಹಸದಿ ನೀನು…..!
ಹೇಳು ಅವಸಾನದ ಬಗ್ಗೆ ನಿನಗೇನು ಗೊತ್ತು.,
ನಾನಿರದಿರೆ ನೀನೂ ಇರಲಾರೆ ಒಂದು ಕ್ಷಣಿಕ ಹೊತ್ತೂ.!
ಮಾತು ಬಾರದು ಎನಗೆ ಎಂದು ಏನೂ ಅರಿಯಲಾರೆ ನಾನು
ಎಂದೆಲ್ಲ ಎಣಿಸಬೇಡ….
ಧೂಮ ಸೇದಿ ಬಿಡುತ, ಕುಡಿದು ಕಂಡಕಂಡಲ್ಲಿ ಬಾಟಲಿ ಬಿಸುಟಿ
ನನ್ನ ಕೆಡಿಸುತಿಹ ನಿನ್ನ ಚೆನ್ನಾಗಿ ನಾ ಬಲ್ಲೆ..
ಹೇಳಲಾಗದು ಎನಗೆ ಎಂದೂ ಅಭಿಪ್ರಾಯಿಸದಿರು,
ಕಾಲಕಾಲಕೆ ಕಾಲನೊಡೆ ಸೇರಿ ನಾನು ಮರುತ್ತರವ ನಿನಗೆ ಕೊಡುತಿಹೆ..

ನೋಡು ನೀನೊಬ್ಬನೇ ಅಲ್ಲ ನನ್ನ ಮಡಿಲಲಿ ಇರುವವ..
ವ್ಯಾಘ್ರ, ಸಿಂಹ,ಕಾಗೆ,ನವಿಲು, ಕೋಗಿಲೆ,ಗಂಧ, ಹೊನ್ನೆ,ಬೇವು, ಜಾಲಿ..
ಹೀಗೆ ಕೋಟ್ಯಂತರ ವಿಧದ ಜೀವಗಳಿವೆ..,
ಅವನ್ನೆಲ್ಲ ನಾನೇ ಸಾಕಬೇಕು.
ನನ್ನ ಅಳಲ ಅರ್ಥೈಸಿಕೊ,
ಸಿಕ್ಕಸಿಕ್ಕಲ್ಲಿ ಪ್ಲಾಸ್ಟಿಕ್ ನ ತೂರಬೇಡ,
ಕಂಡಕಂಡಲ್ಲಿ ನೀರು ಗಾಳಿಯ ಕೆಡಿಸಬೇಡ.
ಇರಲಿ ಒಂದಷ್ಟು ಪಾವಿತ್ರ್ಯತೆ ಅದಕ್ಕೆ….!
ನೀನಂತೂ ‘ಆಚಾರ’ ‘ಸಂಸ್ಕಾರ’ ಎಂಬ ಪದಗಳ ಅರ್ಥ ಮರೆತಿರಬಹುದು..
ಆದರೆ ನನಗೆ ಒಂದಷ್ಟು ಸಂಸ್ಕಾರವಿದೆ, ಆಚಾರವಿದೆ..
ನಿನಗೆ ಉತ್ತರ ಕೊಡಲು ಅದನ್ನೆಲ್ಲ ನಾ ಮರೆಯುವಂತೆ ಮಾಡಬೇಡ.!
ನೋಡು ಇದು ನಿನಗೆ ನನ್ನ ವಿನಂತಿ ಎಂದಿಟ್ಟುಕೊ,
ಹೀಗೆ ನನ್ನ ಮೇಲೆ ನೀ ಕಂಡಕಂಡದ್ದನ್ನು ಎರಚಿ ಹರಿಹಾಯ್ದರೆ
ನಿನ್ನ ಮೇಲಿನ ಅದರ ಪರಿಣಾಮವ ಅರಿಯುವೆ ನೀ ಶೀಘ್ರದಲ್ಲೇ..
ನನಗಂತೂ ಯಾರನ್ನೂ ನೋಯಿಸುವ ಇರಾದೆಯಿಲ್ಲ.
ಯಾಕೆಂದರೆ “ನಿನ್ನಂತಲ್ಲ ನಾನು…….!”
ಇಲ್ಲಿಯ ಸಕಲವ ಪೊರೆಯುವ ನನ್ನ ಜವಾಬ್ದಾರಿಯ
ಸಂಪೂರ್ಣವಾಗಿ ನಾ ಬಲ್ಲೆ,
ಸುಮ್ಮನೆ ಕೆಣಕಿ ನನ್ನ ತಾಳ್ಮೆ ಪರೀಕ್ಷಿಸದಿರು.
ಮಗುವಂತೆ ನನ್ನ ಮಡಿಲಲ್ಲಿಟ್ಟು ನಿನ್ನ ಸಲಹುವೆ..
ನೋಡು, ಆದರೂ ಕಡೆಯ ಮಾತೊಂದ ಕೇಳು..
ನನ್ನ ಇಷ್ಟೂ ಮಾತುಗಳಿಗೆ ನೀ ಕಿವಿಗೊಡದಿರೂ
‘ಅರಿಯದ ಮಗು’ ಎಂದು ನೀನಿರುವಷ್ಟು ದಿನ ನಿನ್ನ ಸಾಕುವೆ.
ಆ ಬಗ್ಗೆ ಏನೂ ಚಿಂತಿಸದಿರು….!
ಯಾಕೆಂದರೆ ಮೊದಲೇ ಹೇಳಿರುವೆನಲ್ಲ “ನಿನ್ನಂತಲ್ಲ ನಾನು…..!”
*****




ರಾಘವೇಂದ್ರ ರವರೆ,
ಪ್ರಕೃತಿ ಪ್ರೀತಿಯಿಂದಲೇ ನಮ್ಮನ್ನು ಎಚ್ಚರಿಸುತ್ತಿದೆ. ನಿಮ್ಮ ಕವನದ ವಸ್ತು ಮತ್ತು ಬರೆದ ಧಾಟಿ ಅತ್ಯುತ್ತಮ.